ಮುಧೋಳ ಭಾರೀ ಮಳೆ; ಹಳ್ಳ ದಾಟುವಾಗ ಕೊಚ್ಚಿಹೋಗಿ ಯುವಕ ಸಾವು



ಮುಧೋಳ (ಸೆ. 26): ಒಂದೇ ಸಮನೆ ಮಳೆ ಸುರಿದ ಕಾರಣದಿಂದ ಓರ್ವ ಯುವಕ ಪ್ರಾಣ ಕಳೆದುಕೊಂಡಿದ್ದಾನೆ. ತುಂಬಿ ಹರಿಯುತ್ತಿರುವ ಹಳ್ಳದಲ್ಲಿ ದಾಟುವ ವೇಳೆ ಯುವಕ ಕೊಚ್ಚಿಹೋದ ಘಟನೆ ಒಂಟಗೋಡಿ ಗ್ರಾಮದಲ್ಲಿ ನಡೆದಿದೆ. ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಒಂಟಗೋಡಿ ಗ್ರಾಮದ ಸುಭಾಷ್ ಅಡವಿ ಎಂಬ 27 ವರ್ಷದ ಯುವಕ ಮೃತಪಟ್ಟಿದ್ದಾನೆ. ಗ್ರಾಮಸ್ಥರ ಸಹಾಯದಿಂದ ಯುವಕನ ಶವವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹೊರಗೆಳೆದಿದ್ದಾರೆ. ಮೃತ ಯುವಕ ಡಿಸಿಸಿ ಬ್ಯಾಂಕ್ ಉದ್ಯೋಗಿಯಾಗಿದ್ದ. ಕಾರ್ಯ ನಿಮಿತ್ತ ಹಳ್ಳ ದಾಟಿ ಹೋಗುತ್ತಿದ್ದ ವೇಳೆ ಅವಘಡ ಸಂಭವಿಸಿ, ಆತನ ಜೀವವೇ ಹೋಗಿದೆ. ಇದರಿಂದ ಆತನ ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲುಮುಟ್ಟಿದೆ. ಲೋಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಗಲಕೋಟೆಯಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಕೆರೆ ಒಡೆದು, ಪಕ್ಕದ ಗುಡಿಸಲುಗಳು ಜಲಾವೃತವಾಗಿವೆ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಕೆರೆ ಒಡೆದು ಏಕಾಏಕಿ ಗುಡಿಸಲುಗಳಿಗೆ ನುಗ್ಗಿದ ನೀರಿನಿಂದ ಗುಡಿಸಲುವಾಸಿ ಕುಟುಂಬಸ್ಥರು ಅತಂತ್ರರಾಗಿದ್ದಾರೆ. ಸ್ಥಳಕ್ಕೆ ಹುನಗುಂದ ತಹಶೀಲ್ದಾರ್ ಬಸವರಾಜ್ ನಾಗರಾಳ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ನವೀನ ಹಳೆಯದು